Current Date 29 Jul, 2026

ಸಂಗೀತ ನಿರ್ದೇಶಕ ಇಳಯರಾಜಾಗೆ ದೇವಸ್ಥಾನದಲ್ಲಿ ಅವಮಾನ? ವೀಡಿಯೋ ವೈರಲ್

ಸಂಗೀತಾ ಮಾಂತ್ರಿಕ ಇಳಯರಾಜಾಗೆ ತಮಿಳುನಾಡಿನ ದೇವಸ್ಥಾನದಲ್ಲಿ ಕಹಿ ಅನುಭವ ಎದುರಾಗಿದೆ. ಮಾರ್ಗಶಿರ ಮಾಸ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ತಮಿಳುನಾಡಿನ ಶ್ರೀವಿಲ್ಲಿಪುತ್ತೂರು ಆಂಡಾಳ್ ದೇವಸ್ಥಾನಕ್ಕೆ ಇಳಯರಾಜಾ ಭೇಟಿ ನೀಡಿದ್ದರು. ಆದರೆ ಅವರಿಗೆ ದೇವಸ್ಥಾನದ ಗರ್ಭಗುಡಿ ಮುಂಭಾಗದ ಮಂಟಪ ಪ್ರವೇಶಿಸಲು ಅವಕಾಶ ಸಿಗಲಿಲ್ಲ ಎನ್ನಲಾಗಿದೆ. ಅದಕ್ಕೆ ಸಂಬಂಧಿಸಿದ ವೀಡಿಯೋ ವೈರಲ್ ಆಗುತ್ತಿದೆ.

ನೂರಾರು ಸಿನಿಮಾಗಳಿಗೆ ಅದ್ಭುತ ಸಂಗೀತ ನೀಡಿ ಮೋಡಿ ಮಾಡಿದವರು ಇಳಯರಾಜ. ಬರೀ ಸಿನಿಮಾ ಮಾತ್ರವಲ್ಲದೇ ಸಾಕಷ್ಟು ಭಕ್ತಿ ಪ್ರಧಾನ ಗೀತೆಗಳಿಗೆ ಸಾಹಿತ್ಯ, ಸಂಗೀತ ಒದಗಿಸಿದ್ದಾರೆ. ಬೆಳ್ಳಂ ಬೆಳಗ್ಗೆ ಶ್ರೀವಿಲ್ಲಿಪುತ್ತೂರು ಆಂಡಾಳ್ ದೇವಸ್ಥಾನದಲ್ಲಿ ಆಂಡಾಳ್, ರಂಗಮನ್ನಾರ್ ದರ್ಶನಕ್ಕೆ ಇಳಯರಾಜಾ ತೆರಳಿದ್ದರು. ಆದರೆ ಅವರನ್ನು ಗರ್ಭಗುಡಿ ಮುಂಭಾಗ ಅರ್ಧ ಮಂಟಪಕ್ಕೆ ಹೋಗದಂತೆ ಅರ್ಚಕರು ಹೊರಗೆ ಕಳುಹಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.