ದರ್ಶನ್ ಜೈಲು ಪಾಲಾಗಿ ಒಂದಲ್ಲ, ಮೂರು ತಿಂಗಳಾಗುತ್ತಾ ಬರುತ್ತಿವೆ. ಈ ಎರಡೂವರೆ ತಿಂಗಳಿನಲ್ಲಿ ಅವರನ್ನು ಹೊರ ತರುವ ಅನೇಕ ಪ್ರಯತ್ನಗಳಾಗಿವೆ. ಆದರೆ, ಫಲಿತಾಂಶ ಮಾತ್ರ ಶೂನ್ಯ. ಜೈಲಾಚೆ ಕರೆತರುವುದು ಇರಲಿ ದರ್ಶನ್ ದುರಾದೃಷ್ಟಕ್ಕೆ ಮನೆಯ ರುಚಿ ಮತ್ತು ಶುಚಿಯಾದ ಊಟ ತಿನ್ನುವ ಸೌಭಾಗ್ಯ ಕೂಡ ಸಿಗಲಿಲ್ಲ. ಮುಂದೆಯಾದರೂ ಸಿಗುತ್ತಾ..? ಸದ್ಯದ ವಾತಾವರಣ ನೋಡಿದರೆ ಅದು ಕೂಡ ಕಷ್ಟವೆನ್ನುವ ಮಾತು ಕೇಳಿ ಬರುತ್ತಿದೆ. ಯಾಕೆಂದರೆ ರೇಣುಕಾಸ್ವಾಮಿಯ ಕೊಲೆ ಪ್ರಕರಣದಲ್ಲಿ ದರ್ಶನ್ ಪಾತ್ರದ ಕುರಿತು ಪೊಲೀಸರು ವಿವರಣೆಯನ್ನು ನೀಡಿದ್ದಾರೆ. ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ಇನ್ನೂ ದರ್ಶನ್ ಅವರನ್ನು ಎ2ದಿಂದ ಎ1 ಮಾಡಲಾಗುತ್ತೆ ಅನ್ನುವ ಮಾತು ಕೇಳಿ ಬರುತ್ತಿತ್ತು. ಆದರೆ.. ಚಾರ್ಜ್ ಶೀಟ್ನಲ್ಲಿ ದರ್ಶನ್ ಅವರನ್ನು ಎ2 ಎಂದೇ ನಮೂದಿಸಿರುವ ಪೊಲೀಸರು ರೇಣುಕಾಸ್ವಾಮಿಯ ಅಪಹರಣದ ಹಿಂದೆ ದರ್ಶನ್ ಕೈ ಇದೆ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ. ದರ್ಶನ್ ಅವರ ಆದೇಶದ ಮೇರೆಗೆ ಅವರ ಸಂಗಡಿಗರು ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಅಪಹರಿಸಿದ್ದು ಎಂದು ಕೂಡ ಉಲ್ಲೇಖಿಸಿದ್ದಾರೆ. ಪಟ್ಟಣಗೆರೆ ಶೆಡ್ಗೆ ಕರೆದೊಯ್ಯುವಂತೆ ಕೂಡ ಹೇಳುವುದಲ್ಲದೇ, ರೇಣುಕಾಸ್ವಾಮಿ ಮೃತ ದೇಹವನ್ನು ಎಲ್ಲಾದರೂ ಬಿಸಾಕುವಂತೆ ಕೂಡ ದರ್ಶನ್ ಅವರೇ ಹೇಳಿದ್ದರು ಎಂದು ಕೂಡ ಪೊಲೀಸರು ಜಾರ್ಜ್ಶೀಟ್ನಲ್ಲಿ ಉಲ್ಲೇಖ ಮಾಡಿರುವುದಾಗಿ TV9 ಕನ್ನಡ ವರದಿ ಮಾಡಿದೆ.